​ಹಸಿರುಮಕ್ಕಿ ಸೇತುವೆ: ಮೇ ಅಂತ್ಯದೊಳಗೆ ಲೋಕಾರ್ಪಣೆ – ಸಚಿವ ಸತೀಶ್ ಜಾರಕಿಹೊಳಿ

Photo of author

By vishwachetana807@gmail.com

ಸಾಗರ: | ಫೆಬ್ರವರಿ 23: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹಸಿರುಮಕ್ಕಿ ಬಳಿ ಶರಾವತಿ ನದಿ ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಲ್ಲಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ಸೇತುವೆ ಕಾಮಗಾರಿಯನ್ನು ಮೇ ಮಾಸಾಂತದೊಳಗೆ ಪೂರ್ಣಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು.

ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ಇಲಾಖೆಯ ಅಧಿಕಾರಿಗಳೊಂದಿಗೆ ಹಸಿರುಮಕ್ಕಿ ಸೇತುವೆ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ ಸಚಿವರು, ಹಿನ್ನೀರಿನ ಲಾಂಚ್ ಮೂಲಕ ಪ್ರಯಾಣಿಸಿ ಕಾಮಗಾರಿಯನ್ನು ಖುದ್ದಾಗಿ ವೀಕ್ಷಿಸಿದರು.

ರೂ. 125.67 ಕೋಟಿ ವೆಚ್ಚದ ಯೋಜನೆ
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, “ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ಅಗತ್ಯವಿದ್ದ ರೂ. 56.14 ಕೋಟಿ ಅನುದಾನವನ್ನು ನಮ್ಮ ಸರ್ಕಾರ ಬಿಡುಗಡೆಗೊಳಿಸಿ ಕಾಮಗಾರಿಗೆ ವೇಗ ನೀಡಿದೆ. KRDCL ವತಿಯಿಂದ ಒಟ್ಟು ರೂ. 125.67 ಕೋಟಿ ಅಂದಾಜು ವೆಚ್ಚದಲ್ಲಿ ಈ ಸೇತುವೆ ನಿರ್ಮಾಣವಾಗುತ್ತಿದ್ದು, ಮೇ ತಿಂಗಳಲ್ಲಿ ಮಾನ್ಯ ಮುಖ್ಯಮಂತ್ರಿಗಳ ಹಸ್ತದಿಂದ ಉದ್ಘಾಟನೆ ನೆರವೇರಿಸಲಾಗುವುದು,” ಎಂದರು.

​ಕಾಮಗಾರಿಯಲ್ಲಿ ಬಳಸಲಾದ ದೈತ್ಯ ಕಾಂಕ್ರೀಟ್ ಬ್ಲಾಕ್‌ಗಳ ಗುಣಮಟ್ಟದಲ್ಲಿ ಕಂಡುಬಂದ ತಾಂತ್ರಿಕ ನ್ಯೂನತೆಗಳಿಂದಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸ್ವಲ್ಪ ವಿಳಂಬವಾಗಿದೆ. ಆದರೆ, ಇನ್ನು ಮುಂದೆ ಯಾವುದೇ ವಿಳಂಬಕ್ಕೆ ಅವಕಾಶ ನೀಡದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಶ್ರಮಕ್ಕೆ ಫಲ
ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಈ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಿ, ನಿರಂತರವಾಗಿ ಬೆನ್ನಟ್ಟುತ್ತಿರುವುದನ್ನು ಸಚಿವರು ಶ್ಲಾಘಿಸಿದರು. ಬೆಳಗಾವಿ ಅಧಿವೇಶನದ ಸಂದರ್ಭದಲ್ಲೂ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ತುರ್ತು ಸಭೆ ನಡೆಸಿ ಕಾಮಗಾರಿ ಚುರುಕುಗೊಳಿಸಲು ಶಾಸಕರು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು ಎಂಬ ಅಂಶವನ್ನು ಸಭೆಯಲ್ಲಿ ಸ್ಮರಿಸಲಾಯಿತು.

ಸೇತುವೆಯ ಮಹತ್ವ: ಅಂತರ ಕಡಿತ: ಸಾಗರದಿಂದ ಕೊಲ್ಲೂರಿಗೆ ಇರುವ ದೂರದಲ್ಲಿ 32 ಕಿ.ಮೀ. ಉಳಿತಾಯವಾಗಲಿದೆ.
•ಸಂಪರ್ಕ ಕ್ರಾಂತಿ: ಈ ಸೇತುವೆಯು ಮಧ್ಯ ಹಾಗೂ ಉತ್ತರ ಕರ್ನಾಟಕ ಭಾಗದಿಂದ ಕರಾವಳಿಯ ಉಡುಪಿ, ಕುಂದಾಪುರ ಮತ್ತು ಮಂಗಳೂರು ಬಂದರಿಗೆ ಸುಲಭ ಸಂಪರ್ಕ ಕಲ್ಪಿಸಲಿದೆ.
•ಸಂತ್ರಸ್ತರ ನೆರವು: ಶರಾವತಿ ಹಿನ್ನೀರಿನ ಆರು ಪಂಚಾಯಿತಿ ವ್ಯಾಪ್ತಿಯ ಸಂತ್ರಸ್ತ ಗ್ರಾಮಗಳ ನಿವಾಸಿಗಳಿಗೆ ಲಾಂಚ್ ಅವಲಂಬನೆಯಿಂದ ಮುಕ್ತಿ ಸಿಗಲಿದೆ.

ಸಾಗರ ನಗರ ಅಭಿವೃದ್ಧಿಗೆ ರೂ. 11 ಕೋಟಿ
ಸಾಗರ ಪಟ್ಟಣದ ರಸ್ತೆ ಅಗಲೀಕರಣ ಕಾಮಗಾರಿಗೂ ಚಾಲನೆ ನೀಡಲಾಗಿದ್ದು, ಈಗಾಗಲೇ ರೂ. 2 ಕೋಟಿ ಬಿಡುಗಡೆಯಾಗಿದೆ. ಭೂ ಪರಿಹಾರಕ್ಕಾಗಿ ಬಾಕಿ ಇರುವ ರೂ. 11 ಕೋಟಿ ಮೊತ್ತವನ್ನು ಶೀಘ್ರವೇ ಮಂಜೂರು ಮಾಡುವುದಾಗಿ ಸಚಿವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು, “ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರ ಆಶಯದಂತೆ ಸೇತುವೆ ಕಾರ್ಯಕ್ಕೆ ವೇಗ ದೊರೆತಿರುವುದು ಸಂತಸ ತಂದಿದೆ. ಇದು ಈ ಭಾಗದ ಜನರ ದಶಕಗಳ ಕನಸಾಗಿದೆ,” ಎಂದು ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಬರಹ: ತಂಡ, vishwachetana.com

Leave a Comment