
ರಿಪ್ಪನ್ಪೇಟೆ: “ನನ್ನ ಈ ಹೋರಾಟ ಅಧಿಕಾರಕ್ಕಾಗಿಯಲ್ಲ, ಬದಲಾಗಿ ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಮತ್ತು ಮುಂದಿನ ಯುವಜನಾಂಗದ ಉಜ್ವಲ ಭವಿಷ್ಯಕ್ಕಾಗಿ” ಎಂದು ಮಾಜಿ ಶಾಸಕ ಬಿ. ಸ್ವಾಮಿರಾವ್ ಅವರು ಘೋಷಿಸಿದರು.
ಇತ್ತೀಚೆಗೆ ರಿಪ್ಪನ್ಪೇಟೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಹೊಸನಗರ ತಾಲ್ಲೂಕಿನ ಜ್ವಲಂತ ಸಮಸ್ಯೆಗಳಿಗೆ ಮುಕ್ತಿ ಹಾಡಲು ಮತ್ತು ಸರ್ಕಾರದ ಗಮನ ಸೆಳೆಯಲು ಹಮ್ಮಿಕೊಂಡಿರುವ ಪಾದಯಾತ್ರೆಯ ಕುರಿತು ಮಾಹಿತಿ ನೀಡಿದರು.

ಪಕ್ಷಾತೀತ ಒಕ್ಕೂಟ:
ಈ ಹೋರಾಟಕ್ಕೆ ಹೊಸನಗರದ ಪ್ರಮುಖ ರಾಜಕೀಯ ಮುಖಂಡರು ಪಕ್ಷಾತೀತವಾಗಿ ಕೈಜೋಡಿಸಿರುವುದು ವಿಶೇಷವಾಗಿದೆ. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಕಲಗೋಡು ರತ್ನಾಕರ್, ಬಿಜೆಪಿಯ ಹಿರಿಯ ಮುಖಂಡ ಎನ್.ಆರ್. ದೇವಾನಂದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರುಮೌಳಿಗೌಡ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎನ್. ವರ್ತೇಶ್, ಮತ್ತು ಬಿಜೆಪಿ ಮಂಡಲ ಅಧ್ಯಕ್ಷ ಎನ್. ಸತೀಶ್ ಸೇರಿದಂತೆ ಎಲ್ಲಾ ಪ್ರಮುಖ ಪಕ್ಷಗಳ ನಾಯಕರು ಭಾಗವಹಿಸಿ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.


ಸಾಂಸ್ಕೃತಿಕ ಮೆರುಗು ಹಾಗೂ ಸಾರ್ವಜನಿಕ ಸಹಭಾಗಿತ್ವ:
ಈ ಪಾದಯಾತ್ರೆಯು ಸಾಂಪ್ರದಾಯಿಕ ಶೈಲಿಯಲ್ಲಿ ಜರುಗಲಿದ್ದು, ಗಂಟೆ, ಜಾಗಟೆ, ಶಂಖ, ಕಹಳೆಗಳ ನಾದದೊಂದಿಗೆ ಡೊಳ್ಳು ಕುಣಿತ, ವೀರಗಾಸೆ ಮತ್ತು ಭಜನಾ ತಂಡಗಳು ಮೆರುಗು ನೀಡಲಿವೆ. ತಾಲ್ಲೂಕಿನ ಪ್ರತಿ ಮನೆಯಿಂದ ಒಬ್ಬರಾದರೂ ಈ ಪಾದಯಾತ್ರೆಯಲ್ಲಿ ಭಾಗವಹಿಸುವ ಮೂಲಕ ಸಂಘಟನೆಯನ್ನು ಬಲಪಡಿಸಬೇಕು ಮತ್ತು ಸರ್ಕಾರದ ವಿರುದ್ಧ ‘ಕಿಚ್ಚಿನ ಕ್ರಾಂತಿ’ ಮಾಡಬೇಕು ಎಂದು ಬಿ. ಸ್ವಾಮಿರಾವ್ ಕರೆ ನೀಡಿದರು.
ಜಿ.ಪಂ. ಮಾಜಿ ಸದಸ್ಯ ಬಂಡಿ ರಾಮಚಂದ್ರ, ಸಾಮಾಜಿಕ ಕಾರ್ಯಕರ್ತ ಟಿ.ಆರ್. ಕೃಷ್ಣಪ್ಪ, ಮುಖಂಡರಾದ ಆನಂದ ಮೆಣಸೆ, ವೀರೇಶ್ ಅಲುವಳ್ಳಿ, ಆರ್. ಎ ಚಾಬುಸಾಬ್, ದೇವೇಂದ್ರಪ್ಪ ಗೌಡ, ಎಂ. ರಾಮಚಂದ್ರ, ಮಹೇಶ್, ಮಧುಸೂದನ್, ಗಣಪತಿ, ಪರಮೇಶ್, ಸುರೇಶ ಭಟ್ ಸೇರಿದಂತೆ ಹಲವು ಗಣ್ಯರು ಸಭೆಯಲ್ಲಿ ಉಪಸ್ಥಿತರಿದ್ದು, ಪಾದಯಾತ್ರೆಯ ಯಶಸ್ಸಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ಬರಹ: ತಂಡ, vishwachetana.com









