ಹೊಸನಗರದಲ್ಲಿ ಅಕ್ರಮ ಮರಳುಗಾರಿಕೆ: ಹಾಲಿ ಹಾಗೂ ಮಾಜಿ ಶಾಸಕರ ಮೌನದ ಬಗ್ಗೆ ಅನುಮಾನ, ಹೋರಾಟದ ಎಚ್ಚರಿಕೆ

Photo of author

By vishwachetana807@gmail.com

ಹೊಸನಗರ: ಹೊಸನಗರ ತಾಲ್ಲೂಕಿನಲ್ಲಿ ಶರಾವತಿ ಹಿನ್ನೀರಿನ ಪ್ರದೇಶಗಳಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದ್ದು, ಈ ಬಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಎಷ್ಟೇ ದೂರು ನೀಡಿದರೂ ಅಕ್ರಮ ಮರಳು ದಂಧೆಗೆ ಕಡಿವಾಣ ಬಿದ್ದಿಲ್ಲ. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದು, ಅದರ ವಿಚಾರಣೆ ಹಂತಕ್ಕೆ ಬಂದಿದೆ ಎಂದು ಜನ ಸಂಘರ್ಷ ಪರಿಷತ್ ಸಂಚಾಲಕ ಗಿರೀಶ್ ಆಚಾರ್ಯ ಹೇಳಿದರು. ಮೂರು ತಿಂಗಳಿನಿಂದ ಹೊಸನಗರ ತಾಲ್ಲೂಕಿನಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಮೂರು ದಿನಗಳೊಳಗೆ ಅಕ್ರಮ ಮರಳುಗಾರಿಕೆ ಹಾಗೂ ಸಂಗ್ರಹಣೆ ಮತ್ತು ಸಾಗಾಣಿಕೆಗೆ ಬ್ರೇಕ್ ಹಾಕದಿದ್ದರೆ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಪವಾಸ ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಹೊಸನಗರ ತಾಲ್ಲೂಕಿನ ಸುತ್ತಮುತ್ತಲಿನ ಶರಾವತಿ ನದಿ ಪ್ರದೇಶಗಳಲ್ಲಿ ಬೋಟ್ ಮೂಲಕ ಮರಳುಗಾರಿಕೆ ನಡೆಯುತ್ತಿದ್ದು, ಹೊಸನಗರ ಸಮೀಪ ದ್ಯಾವಸರೆ, ಎಡಜಟ್ಟೆ, ಮಳಲೆ, ಬಾಳೆಕೊಪ್ಪ, ತೆಂಕಬೈಲು, ಈಚಲಕೊಪ್ಪ ಪ್ರದೇಶಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿದರು.
ಹೊಸನಗರದಿಂದ ಉಮಾಪತಿ ದೇವಸ್ಥಾನದ ಮಾರ್ಗ ಮಧ್ಯದಲ್ಲಿ ಅಕ್ರಮವಾಗಿ ಮರಳು ಶೇಖರಣೆ ಮಾಡಲಾಗುತ್ತಿದ್ದು, ಹೊಸನಗರದಿಂದ ಒಂದು ಕಿಲೋಮೀಟರ್ ದೂರದ ಶಿವಮೊಗ್ಗ ರಸ್ತೆಯಲ್ಲಿಯೂ ಮರಳು ಶೇಖರಣೆ ನಡೆಯುತ್ತಿದೆ. ಸುತ್ತಮುತ್ತ ಹುಡುಕಿದರೆ ನೂರಾರು ಗಟ್ಟಲೆ ಮರಳು ಶೇಖರಣೆ ಪತ್ತೆಯಾಗುತ್ತದೆ. ಇವೆಲ್ಲಕ್ಕೂ ಅಧಿಕಾರಿಗಳು ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಅಕ್ರಮ ಮರಳುಗಾರಿಕೆಗೆ ಶಾಸಕರ ಅಭಯ ಹಸ್ತ ?

ಹೊಸನಗರ ತಾಲ್ಲೂಕಿನ ಸುತ್ತಮುತ್ತ ಹಿನ್ನೀರಿನ ಪ್ರದೇಶಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂದು ಗೊತ್ತಿದ್ದರೂ ಹೊಸನಗರ-ಸಾಗರ ಕ್ಷೇತ್ರದ ಶಾಸಕರು ಮೌನವಾಗಿರುವುದು ತಮ್ಮ ಸಂಪೂರ್ಣ ಅಭಯಹಸ್ತದೊಂದಿಗೆ ಬೆಂಬಲವಿದೆಯೇ ಎಂಬ ಅನುಮಾನಕ್ಕೆ ಕಾರಣವಾಗಿದೆ. ಅಧಿಕಾರಿಗಳನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡು ಅಕ್ರಮ ಮರಳುಗಾರಿಕೆಗೆ ಸಹಕಾರ ನೀಡುತ್ತಿದ್ದಾರೆ ಎನ್ನುವ ಅನುಮಾನ ಮೂಡುತ್ತಿದೆ. ಇಲ್ಲದಿದ್ದರೆ ಅಧಿಕಾರಿಗಳು ಇಷ್ಟು ಮೌನವಾಗಿರಲು ಸಾಧ್ಯವಿಲ್ಲ ಎಂದು ಗಿರೀಶ್ ಆಚಾರ್ ಆರೋಪಿಸಿದರು.

ಮುಖ್ಯಮಂತ್ರಿಗಳ ಗಮನ ಹರಿಸಲು ಆಗ್ರಹ
ಈಗಾಗಲೇ ಅಧಿಕಾರಿಗಳ ಮೂಲಕ ಹೊಸನಗರದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂಬ ಮಾಹಿತಿ ಸರ್ಕಾರದ ಗಮನಕ್ಕೆ ತರಲಾಗಿದೆ. ಅಕ್ರಮ ಗಣಿಗಾರಿಕೆ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿ ಪಾರದರ್ಶಕ ಆಡಳಿತ ನೀಡುವುದಾಗಿ ಹೇಳಿದ್ದ ಸರ್ಕಾರ, ಇದೀಗ ತಮ್ಮದೇ ಪಕ್ಷದ ಶಾಸಕರ ಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯನ್ನು ಗಮನಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.

ಬಿಜೆಪಿಯ ಮಾಜಿ ಸಚಿವರ ಮೌನದ ಹಿಂದೆ ಹಲವು ಅನುಮಾನ ?

ಹೊಸನಗರ-ಸಾಗರ ಕ್ಷೇತ್ರದ ಮಾಜಿ ಬಿಜೆಪಿ ಶಾಸಕರು ಕೂಡ ಅಕ್ರಮ ಮರಳುಗಾರಿಕೆ ವಿರುದ್ಧ ಧ್ವನಿ ಎತ್ತುತ್ತಿಲ್ಲ ಇದು ಹಲವು ಅನುಮಾನಗಳಿಗೆ ಎಡೆ ಮಾಡಿದೆ. ತಮ್ಮ ಕ್ಷೇತ್ರದಲ್ಲೇ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಪ್ರತಿದಿನ ಪತ್ರಿಕೆ ಹಾಗೂ ವಾಟ್ಸಪ್‌ ಗುಂಪುಗಳಲ್ಲಿ ಸುದ್ದಿಗಳು ಬರುತ್ತಿದ್ದರೂ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಪ್ರಶ್ನಿಸಿದರು.

ಮೂರು ದಿನಗಳೊಳಗೆ ಅಕ್ರಮ ಮರಳುಗಾರಿಕೆಗೆ ಬ್ರೇಕ್ ಬೀಳದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಗಿರೀಶ್ ಆಚಾರ್ ಎಚ್ಚರಿಸಿದರು.

ಬರಹ: Chetandas Hosamane

Leave a Comment