ತಪೋರತ್ನ ಶ್ರೀ ಷ. ಬ್ರ. ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳ ಪಟ್ಟಾಧಿಕಾರ 51ನೇ ವರ್ಷದ ವರ್ಧಂತಿ – ಗುರು ಶಿವಾನಂದ ಸದ್ಧರ್ಮ ಜನಜಾಗೃತಿ ಯಾತ್ರೆ
ತಪೋರತ್ನ ಶ್ರೀ ಷ. ಬ್ರ. ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳ ಪಟ್ಟಾಧಿಕಾರ 51ನೇ ವರ್ಷದ ವರ್ಧಂತಿ ಮಹೋತ್ಸವದ ಅಂಗವಾಗಿ ಆಯೋಜಿಸಲಾದ ಶ್ರೀ ಗುರು ಶಿವಾನಂದ ಸದ್ಧರ್ಮ ಜನಜಾಗೃತಿ ಯಾತ್ರೆ ಇಂದು ಹೊಸನಗರ ತಾಲೂಕು ಬ್ರಹ್ಮೇಶ್ವರ ವೀರಭದ್ರ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿತು. ಶ್ರೀಗಳಿಗೆ ಪೂರ್ಣ ಕುಂಭ ಸ್ವಾಗತ ನೀಡಿ ಭಕ್ತಿಭಾವದಿಂದ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.

“ಅರಿವಿರಲಿ ಧರ್ಮ ಉಳಿಯಲಿ, ಕರ್ಮ ಹರಿಯಲಿ – ಸರ್ವಧರ್ಮಿಯರಿಗೂ ಭವದಾಟುವ ಏಕೈಕ ಮಂತ್ರ ‘ಓಂ ಗುರುವೇ ನಮಃ’” ಎಂಬ ವಾಣಿಯನ್ನು ಸಾರುತ್ತಾ ಧರ್ಮ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಯಾತ್ರೆ ನಡೆಯುತ್ತಿದೆ.

ಈ ಸಂದರ್ಭದಲ್ಲಿ ಶ್ರೀ ಷ. ಬ್ರ. ಪಶುಪತಿ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು ಬ್ರಹ್ಮೇಶ್ವರ ವೀರಭದ್ರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಧರ್ಮ ಜಾಗೃತಿ ಸಭೆಯಲ್ಲಿ ಭಾಗವಹಿಸಿದರು. ಅವರು ಶಿಕ್ಷಣ, ಧರ್ಮ, ಸಂಸ್ಕಾರ ಹಾಗೂ ಜೀವನ ಮೌಲ್ಯಗಳ ಮಹತ್ವವನ್ನು ವಿವರಿಸಿ ಭಕ್ತರಿಗೆ ಉಪದೇಶ ನೀಡಿದರು.

ಧರ್ಮ ಜಾಗೃತಿ ಕಾರ್ಯಕ್ರಮದಲ್ಲಿ ಗುರುಗಳ ದರ್ಶನ ಹಾಗೂ ಆಶೀರ್ವಾದ ಪಡೆದು ಭಕ್ತಾದಿಗಳು ಪುನೀತರಾದರು. ಸಭೆಯಲ್ಲಿ ಚನ್ನಬಸಪ್ಪಗೌಡ ಬ್ರಹ್ಮೇಶ್ವರ, ಬಿಜಿ ಚಂದ್ರ ಮೌಳಿ ಗೌಡ, ಬಿ. ಯುವರಾಜ್ ಗೌಡ, ಹಾಲಪ್ಪ ಗೌಡ, ದೇವೇಂದ್ರ ಗೌಡ, ಗಣೇಶ್ ಹಿರೇಮಣತಿ, ಬಸವರಾಜ್, ತೀರ್ಥೇಶ್ ಚಿಕ್ಕಮಣತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.









