ಹೊಸನಗರ: ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಾಲ್ಲೂಕು ಮಟ್ಟದ ಕೃಷಿ ಭಾಷಣ ಸ್ಪರ್ಧೆ; ವಿಜೇತರಿಗೆ ನಗದು ಬಹುಮಾನ

Photo of author

By vishwachetana807@gmail.com

ಹೊಸನಗರ: ವಿದ್ಯಾರ್ಥಿಗಳಲ್ಲಿ ಕೃಷಿ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಹೊಸನಗರ ತಾಲ್ಲೂಕು ಕೃಷಿ ಸಮಾಜದ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ತಾಲ್ಲೂಕು ಮಟ್ಟದ ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಕೃಷಿ ಸಮಾಜದ ಅಧ್ಯಕ್ಷ ಎ.ವಿ. ಮಲ್ಲಿಕಾರ್ಜುನ ತಿಳಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷಿ ಮತ್ತು ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಸ್ಪರ್ಧೆಯ ವಿವರಗಳು ಹೀಗಿವೆ:

ಫೆ. 17ಕ್ಕೆ ಮೊದಲ ಸುತ್ತಿನ ಸ್ಪರ್ಧೆ
ಇದೇ ಫೆಬ್ರವರಿ 17ರ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಬಿ.ಆರ್.ಸಿ ಸಭಾಭವನದಲ್ಲಿ ತಾಲ್ಲೂಕಿನ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗಾಗಿ ‘ನಾನು ಕೃಷಿಕನಾದರೆ..!?’ ಎಂಬ ವಿಷಯದ ಕುರಿತು ಮೊದಲ ಸುತ್ತಿನ ಭಾಷಣ ಸ್ಪರ್ಧೆ ನಡೆಯಲಿದೆ. ಪ್ರತಿ ಶಾಲೆಯಿಂದ ಒಬ್ಬ ವಿದ್ಯಾರ್ಥಿಗೆ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ.

ಅಂತಿಮ ಸುತ್ತು ಮತ್ತು ಬಹುಮಾನ
ಮೊದಲ ಸುತ್ತಿನಲ್ಲಿ ಆಯ್ಕೆಯಾದ ಐದು ವಿದ್ಯಾರ್ಥಿಗಳಿಗೆ ಫೆಬ್ರವರಿ 21ರ ಶನಿವಾರ ಬೆಳಿಗ್ಗೆ 10:30ಕ್ಕೆ ಕೃಷಿ ಇಲಾಖೆಯ ಸಭಾಂಗಣದಲ್ಲಿ ಅಂತಿಮ ಸುತ್ತಿನ ಸ್ಪರ್ಧೆ ನಡೆಯಲಿದೆ. ಅಂತಿಮ ಸುತ್ತಿಗೆ ‘ಆಧುನಿಕ ಕೃಷಿ-ಆರೋಗ್ಯಕರ ಕೃಷಿ’ ಎಂಬ ವಿಷಯವನ್ನು ನೀಡಲಾಗಿದೆ.

ಬಹುಮಾನದ ಮೊತ್ತ:
ಪ್ರಥಮ: 5,000 ರೂ. ನಗದು ಹಾಗೂ ನೆನಪಿನ ಕಾಣಿಕೆ.
ದ್ವಿತೀಯ: 3,000 ರೂ. ನಗದು ಹಾಗೂ ನೆನಪಿನ ಕಾಣಿಕೆ.
ತೃತೀಯ: 2,000 ರೂ. ನಗದು ಹಾಗೂ ನೆನಪಿನ ಕಾಣಿಕೆ.

ನಿಬಂಧನೆಗಳು:
8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು.

ಸ್ಪರ್ಧೆಗೆ ಸಂಬಂಧಿಸಿದಂತೆ ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿರುತ್ತದೆ. ತಾಲ್ಲೂಕಿನ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿ ಕೃಷಿ ಅರಿವನ್ನು ಪಸರಿಸಲು ಈ ವೇದಿಕೆಯನ್ನು ಬಳಸಿಕೊಳ್ಳಬೇಕು ಎಂದು ಎ.ವಿ. ಮಲ್ಲಿಕಾರ್ಜುನ ಮನವಿ ಮಾಡಿದ್ದಾರೆ.

ಬರಹ: ತಂಡ, vishwachetana.com

Leave a Comment