
ಹೊಸನಗರ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ನಡೆಸಿದ ಬಿ.ಎ.ಎಂ.ಎಸ್ (BAMS) ಪದವಿ ಪರೀಕ್ಷೆಯಲ್ಲಿ ಹೊಸನಗರ ತಾಲೂಕಿನ ವಿದ್ಯಾರ್ಥಿನಿ ಡಾ. ಸಂಜನಾ ಎಸ್. ರಾವ್ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆಯುವ ಮೂಲಕ ಜಿಲ್ಲೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾರೆ.
ಐದು ಚಿನ್ನದ ಪದಕಗಳ ಗೌರವ:
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿರುವ ಆರೂರು ಲಕ್ಷ್ಮೀನಾರಾಯಣ ರಾವ್ ಸ್ಮಾರಕ ಆಯುರ್ವೇದ ಮಹಾವಿದ್ಯಾಲಯದ ವಿದ್ಯಾರ್ಥಿನಿಯಾಗಿರುವ ಸಂಜನಾ ಅವರು, ವಿವಿಧ ವಿಷಯಗಳಲ್ಲಿ ಅತ್ಯುತ್ತಮ ಸಾಧನೆ ತೋರುವ ಮೂಲಕ ಒಟ್ಟು 5 ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.


ವಿಷಯವಾರು ರ್ಯಾಂಕ್ಗಳ ವಿವರ:
ಪ್ರಥಮ ರ್ಯಾಂಕ್: ಮೌಲಿಕ ಸಿದ್ಧಾಂತ ಮತ್ತು ಅಷ್ಟಾಂಗ ಹೃದಯ, ಚರಕ ಪೂರ್ವಾರ್ಧ ಹಾಗೂ ಶಲ್ಯ ತಂತ್ರ.
ದ್ವಿತೀಯ ರ್ಯಾಂಕ್: ಕ್ರಿಯಾಶರೀರ.
ನಾಲ್ಕನೇ ರ್ಯಾಂಕ್: ಸಂಸ್ಕೃತ.
ಆರನೇ ರ್ಯಾಂಕ್: ದ್ರವ್ಯಗುಣ.
ಏಳನೇ ರ್ಯಾಂಕ್: ರೋಗನಿದಾನ ಮತ್ತು ವಿಕೃತಿ ವಿಜ್ಞಾನ.
ಗ್ರಾಮೀಣ ಪ್ರತಿಭೆಯ ಮಿಂಚು:
ಹೊಸನಗರ ತಾಲೂಕಿನ ಕೋಡೂರು ಗ್ರಾಮದ ಶಶಿಧರ ಎಸ್. ರಾವ್ ಹಾಗೂ ದೀಪಾ ಎಸ್. ರಾವ್ ದಂಪತಿಯ ಪುತ್ರಿಯಾಗಿರುವ ಸಂಜನಾ ಅವರ ಈ ಸಾಧನೆಗೆ ಕುಟುಂಬದವರು, ಶಿಕ್ಷಕರು ಹಾಗೂ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಕಠಿಣ ಪರಿಶ್ರಮ ಮತ್ತು ನಿರಂತರ ಅಧ್ಯಯನದ ಮೂಲಕ ಇವರು ಈ ಉನ್ನತ ಮಟ್ಟದ ಯಶಸ್ಸನ್ನು ಸಾಧಿಸಿದ್ದಾರೆ.
“ಸಂಜನಾ ತನ್ನ ಪರಿಶ್ರಮ, ತನ್ನ ಸಮಯ ಸಮರ್ಪಣೆ ಯಿಂದ ಮತ್ತು ಓದಿನಿಂದ ಈ ಸಾಧನೆ ಮಾಡಿದ್ದಾಳೆ. ಅವಳ ಸಾಧನೆಗೆ ನಾವು ತುಂಬಾ ಸಂತೋಷಪಡುತ್ತೇವೆ. ಮುಂದಿನ ದಿನಗಳಲ್ಲಿ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಲಿ.”
- ಶಶಿಧರ ಎಸ್. ರಾವ್, ತಂದೆ
ಬರಹ: ತಂಡ, vishwachetana.com









