ಹೊಸನಗರ : ಸಂಕ್ರಾಂತಿ ಹಬ್ಬದ ಪವಿತ್ರ ದಿನದಂದು ತಾಲ್ಲೂಕಿನ ಮೂಲೆಗದ್ದೆಯ ಶ್ರೀ ಸದಾನಂದ ಶಿವಯೋಗಾಶ್ರಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಕರ ಸಂಕ್ರಾಂತಿ ಮಹೋತ್ಸವವು ಧಾರ್ಮಿಕ-ಆಧ್ಯಾತ್ಮಿಕ ಭಾವಭರಿತ ವಾತಾವರಣದಲ್ಲಿ ಜರುಗಿತು.

ಈ ಸಂದರ್ಭದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ರೂ.25 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ದಾಸೋಹ ಭವನ ಕಟ್ಟಡದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಕಾರ್ಯಕ್ರಮವು ಆನಂದಪುರ ಮುರುಘ ರಾಜೇಂದ್ರ ಮಠದ ಪೂಜ್ಯ ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯಿತು. ಮೂಲೆಗದ್ದೆ ಮಠದ ಪೀಠಾಧಿಪತಿ ಪೂಜ್ಯ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಅವರ ನೇತೃತ್ವದಲ್ಲಿ ಶಿವನಾಮ ಸ್ಮರಣೆ ಪಠಣ ನೆರವೇರಿಸಿ, ಮಕರ ಸಂಕ್ರಾಂತಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಶಿವನಾಮ ಸ್ಮರಣೆಯ ಮೂಲಕ ಆಧ್ಯಾತ್ಮಿಕ ಶಾಂತಿ ಮತ್ತು ಭಕ್ತಿಯ ಅನುಭೂತಿ ಭಕ್ತರ ಮನಗಳಲ್ಲಿ ಮೂಡಿಬಂದಿತು.


ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ. ಸ್ವಾಮಿರಾವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋಡೂರು ಚಂದ್ರಮೌಳಿ, ಸಾಗರದ ಕೆ.ಎಸ್. ಪ್ರಶಾಂತ್ ಶಿವಪ್ಪ ಸೇರಿದಂತೆ ಹಲವಾರು ಪ್ರಮುಖರು, ಭಕ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ವೈಭವ ಹೆಚ್ಚಿಸಿದರು.







