
ಹೊಸನಗರ, ಜುಲೈ 24: ವಾಮಾಚಾರದ ಹೆಸರಿನಲ್ಲಿ ಜನರಲ್ಲಿ ಭಯದ ವಾತಾವರಣ ಸೃಷ್ಟಿಸುವ ಘಟನೆಗಳು ಅನಾದಿ ಕಾಲದಿಂದಲೂ ನಡೆಯುತ್ತಿವೆ ಎಂಬ ನಂಬಿಕೆ ಸಮಾಜದಲ್ಲಿದೆ. ಇಂತಹ ಅನುಮಾನಾಸ್ಪದ ಕೃತ್ಯಗಳು ಇತ್ತೀಚಿನ ದಿನಗಳಲ್ಲಿ ಮಲೆನಾಡಿನ ಕೆಲವು ಭಾಗಗಳಲ್ಲಿಯೂ ಅಲ್ಲಲ್ಲಿ ಕಂಡುಬರುತ್ತಿವೆ ಎಂಬ ಆತಂಕದ ನಡುವೆ, ಇದೀಗ ಹೊಸನಗರ ತಾಲೂಕಿನ ಹುಂಚ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನೆಬೈಲು ಗ್ರಾಮದ ವಾಟೆಕೂಡ್ಲು ಪ್ರದೇಶದಲ್ಲಿ ವಾಮಾಚಾರದ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ.


ಗ್ರಾಮದ ಶ್ರೀ ಶೇಖರಪ್ಪ ಬಿನ್ ಶಂಕ್ರಪ್ಪ ಹಾಗೂ ಶ್ರೀ ಶೇಖರ ಶೆಟ್ಟಿ ಬಿನ್ ಗಣಪಯ್ಯ ಶೆಟ್ಟಿ ಅವರ ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಪಕ್ಕದಲ್ಲಿ ಕೆಲವು ವಸ್ತುಗಳನ್ನು ಇಟ್ಟು ಅನುಮಾನಾಸ್ಪದ ರೀತಿಯಲ್ಲಿ ಕೃತ್ಯ ಎಸಗಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ.
ಗ್ರಾಮಸ್ಥರ ಮಾಹಿತಿ ಪ್ರಕಾರ, 2026ರ ಜುಲೈ 15ರಂದು ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಮಹಿಳೆಯೊಬ್ಬರು ಈ ದೃಶ್ಯವನ್ನು ಕಂಡು ಭಯಗೊಂಡು ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ. ಇದೇ ರಸ್ತೆಯಲ್ಲಿ ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರು ಪ್ರತಿನಿತ್ಯ ಸಂಚರಿಸುವುದರಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಘಟನೆ ನಡೆದ ಬಳಿಕ ಹಲವು ದಿನಗಳು ಕಳೆದಿದ್ದರೂ, ಆ ರಸ್ತೆಯಲ್ಲಿ ಓಡಾಡಲು ಗ್ರಾಮಸ್ಥರು ಹಿಂಜರಿಯುತ್ತಿದ್ದಾರೆ. ಪರಿಣಾಮವಾಗಿ ಆ ಮಾರ್ಗದಲ್ಲಿ ಜನರ ಓಡಾಟವೂ ಕಡಿಮೆಯಾಗಿದ್ದು, ಮುಂದಿನ ದಿನಗಳಲ್ಲಿ ಈ ಪ್ರದೇಶ ನಿರ್ಜನವಾಗುವ ಆತಂಕ ವ್ಯಕ್ತವಾಗುತ್ತಿದೆ.ಈ ಕುರಿತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿರುವ ಗ್ರಾಮಸ್ಥರು, ಕೃತ್ಯದ ಹಿಂದೆ ಇರುವವರನ್ನು ಪತ್ತೆಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ಸಾರ್ವಜನಿಕರಲ್ಲಿ ಭಯ ನಿವಾರಣೆಯಾಗುವಂತೆ ಪೊಲೀಸ್ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೊಸನಗರ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದಾರೆ.
ಸೂಚನೆ: ಈ ವರದಿ ಗ್ರಾಮಸ್ಥರು ನೀಡಿರುವ ದೂರು ಮತ್ತು ಹೇಳಿಕೆಗಳ ಆಧಾರಿತವಾಗಿದೆ. ಈ ಕೃತ್ಯದ ಉದ್ದೇಶ ಅಥವಾ ಸ್ವರೂಪದ ಕುರಿತು ಪೊಲೀಸ್ ತನಿಖೆಯ ನಂತರವೇ ಅಧಿಕೃತ ಮಾಹಿತಿ ಸ್ಪಷ್ಟವಾಗಲಿದೆ.
ಬರಹ: Chetandas Hosamane









