
ಹೊಸನಗರ: ಭಾನುವಾರ ನಿಧನರಾದ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ವೀರಶೈವ ಸಮಾಜದ ಪ್ರಭಾವಿ ಮುಖಂಡ ಹೆಚ್.ಎಂ. ಚಂದ್ರಶೇಖರಪ್ಪ ಅವರ ನಿಧನವು ಕಾಂಗ್ರೆಸ್ ಪಕ್ಷ ಹಾಗು ಸಾರ್ವಜನಿಕ ಕ್ಷೇತ್ರಕ್ಕೆ ತುಂಬಲಾರದ ಭಾರೀ ನಷ್ಟ ಉಂಟು ಮಾಡಿದೆ ಎಂದು ಹೊಸನಗರ ಕ್ಷೇತ್ರದ ಮಾಜಿ ಶಾಸಕ ಬಿ.ಸ್ವಾಮಿರಾವ್ ತಿಳಿಸಿದರು.

ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 1999ರಲ್ಲಿ ಎಸ್.ಎಂ.ಕೃಷ್ಣ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರದಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಚಂದ್ರಶೇಖರ್, ಅಂದು ಮಾಜಿ ಶಾಸಕರ ವೇದಿಕೆ ರಚಿಸುವ ಮೂಲಕ, ಕಾಲಕಾಲಕ್ಕೆ ಆಯ್ಕೆಯಾದ ಸರ್ಕಾರಗಳ ನಡುವೆ ಕೊಂಡಿಯಾಗಿ, ನಿರಂತರ ಸಂಪರ್ಕ ಸಾಧಿಸುವ ಮೂಲಕ ಅಂದಿನ ಮುಖ್ಯಮಂತ್ರಿಗಳ ಮನವೊಲಿಸುವ ಮೂಲಕ ನೂರಾರು ಮಾಜಿ ಶಾಸಕರ ಹಾಗೂ ಅವರ ಕುಟುಂಬ ವರ್ಗಕ್ಕೆ ಸರಕಾರದ ವತಿಯಿಂದ ಆರೋಗ್ಯ ಹಾಗೂ ಪ್ರಯಾಣ ಭತ್ಯೆ ನೀಡುವಂತೆ ಮಾಡುವಲ್ಲಿ ಸಾಫಲ್ಯರಾಗಿದ್ದರು. ಅಂದು ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ನೂರಾರು ಮಾಜಿ ಶಾಸಕರ ಕುಟುಂಬಕ್ಕೆ ಇವರ ಪ್ರಯತ್ನ ಆಸರೆಯಾಯ್ತು ಎಂದು ಅವರ ಕೊಡುಗೆಯನ್ನು ಸ್ಮರಿಸಿದರು.
ಮಾಜಿ ಶಾಸಕರಾದ ಬಳಿಕಯೂ ಚಂದ್ರಶೇಖರ್ ಅವರು ಸಾರ್ವಜನಿಕ ಹಾಗು ಧಾರ್ಮಿಕ ಕ್ಷೇತ್ರದ ಜೀವನದಲ್ಲಿ ನಿರಂತರ ಸಂಪರ್ಕದಲ್ಲಿದ್ದು ಸಾರ್ವಜನಿಕ ರಂಗಕ್ಕೆ ತಮ್ಮದೇ ಆದ ವಿಶೇಷ ಕೊಡುಗೆ ನೀಡಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ ಎಂದರು. ಮೃತರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಹಾಗು ಕುಟುಂಬವರ್ಗಕ್ಕೆ ನೋವು ತಡೆದುಕೊಳ್ಳಲು ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದರು.
ಬರಹ: Chetandas Hosamane









