
ಪ್ರತಿಭೆಯನ್ನು ಅರಳಿಸಲು ಈ ಬೇಸಿಗೆಯ ಸಾಂಸ್ಕೃತಿಕ ಶಿಬಿರವು ಅವಶ್ಯವಾಗಿದ್ದು ಇಲ್ಲಿ ಕಲಿಸಿದ ಸಂಗೀತ, ನೃತ್ಯ, ಕಲೆ, ಭಜನೆ ಇನ್ನಿತರ ಚಟುವಕೆಗಳನ್ನ ಮುಂದುವರಿಸಿಕೊಂಡು ಹೋಗಬೇಕು ಎಂದು ಹೊಸನಗರ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ ಗಣೇಶಮೂರ್ತಿ ನಾಗರಕೊಡಿಗೆ ಹೇಳಿದರು.
ತಾಲ್ಲೂಕಿನ ಗ್ರಾಮಭಾರತಿ ಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದದೊಂದಿಗೆ ಕಾರಣಗಿರಿಯ ಸಂಸ್ಕೃತಿ ಭವನದಲ್ಲಿ ಸಾಂಸ್ಕೃತಿಕ ಶಿಬಿರ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಮಭಾರತಿ ಟ್ರಸ್ಟ್ ಅಧ್ಯಕ್ಷ ಹನಿಯ ರವಿ ಮಾತನಾಡಿ
ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ತೊಡಗಿದರೆ ಸಂಸ್ಕಾರವೂ ಬೆಳೆಯುತ್ತದೆ ಮತ್ತು ನಮ್ಮ ನಮ್ಮ ಸಂಸ್ಕೃತಿಯ ಉಳಿವಿಗೂ ಸಹಾಯಕವಾಗುತ್ತದೆ ಎಂದರು.
ನಾಲ್ಕು ದಿನ ನಡೆದ ಸಾಂಸ್ಕೃತಿಕ ಶಿಬಿರದಲ್ಲಿ ಸುಮಾರು 25 ಮಕ್ಕಳು ಭಾಗವಹಿಸಿದ್ದು ಸಂಗೀತ,ರಂಗೋಲಿ, ಕ್ಲೇಮಾಡೆಲ್, ಭಜನೆ, ಚಿತ್ರಕಲೆ, ನೃತ್ಯ, ಕ್ರಾಫ್ಟ್, ದೇಶಿ ಆಟಗಳನ್ನು ಕಲಿಸಲಾಯಿತು.

ಕಾರ್ಯಕ್ರಮದಲ್ಲಿ ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ನಳಿನಚಂದ್ರ, ಶಿಬಿರದ ನಿರ್ದೇಶಕಿ ವಿದುಷಿ ಶ್ವೇತಾ ಜೋಯ್ಸ್, ಗ್ರಾಮಪಂಚಾಯ್ತಿ ಮಾಜಿ ಸದಸ್ಯ, ರಾಷ್ಟ್ರೋತ್ಥಾನ ಬಳಗದ ಸಂಚಾಲಕ ಹನಿಯ ಗುರುಮೂರ್ತಿ,ಮತ್ತಿತರರು ಉಪಸ್ಥಿತರಿದ್ದರು.
ಪೋಷಕರ ಪರವಾಗಿ ಶ್ರೀಮತಿ ಮಾಧುರಿ ಮಾತನಾಡಿ ತಾನು 30 ವರ್ಷದ ಹಿಂದೆ ಇದೇ ಸಂಸ್ಥೆ ನಡೆಸುತ್ತಿದ್ದ ಶಿಶುಮಂದಿರ ವಿದ್ಯಾರ್ಥಿಯಾಗಿದ್ದು ನಂತರ ಇವರದೇ ಶಿಬಿರದಲ್ಲಿ ಭಾಗವಹಿಸಿದ್ದೆ. ಈಗ ನನ್ನ ಮಗನೂ ಇದೇ ಸ್ಥಳದಲ್ಲಿ ಶಿಬಿರದಲ್ಲಿ ಭಾಗವಹಿಸಿದ್ದು ಹೆಮ್ಮೆ ಅಂದರು.

ಶಿಬಿರದ ಆರಂಭದಲ್ಲಿ ಶಿಬಿರವನ್ನು ಉದ್ಘಾಟಿಸಿದ ಭರತನಾಟ್ಯ ವಿದುಷಿ ಶ್ರೀಮತಿ ಆರತಿ ಮಹೇಶ್ ಮಾತನಾಡಿ ಗ್ರಾಮಾಂತರ ಪ್ರದೇಶದಲ್ಲಿ ಪ್ರತಿವರ್ಷ ನಡೆಯುವ ಈ ಶಿಬಿರವು ಮಕ್ಕಳಿಗೆ ಪ್ರಯೋಜನಕಾರಿಯಾಗಿದ್ದು ಇದರ ಸದುಪಯೋಗ ಪಡೆಯುವಂತೆ ಪೋಷಕರು ಪ್ರೋತ್ಸಾಹಿಸಬೇಕೆಂದರು.
ಶಿಬಿರದಲ್ಲಿ ಶ್ರೀಮತಿ ವಿದ್ಯಾ, ನಾಗೇಂದ್ರ, ಶ್ರೀಮತಿ ದೀಪ ಹರ್ಷ, ವಿಧುಷಿ ಶ್ರೀಮತಿ ಆರತಿ ಮಹೇಶ್, ವಿದುಷಿ ಶ್ರೀಮತಿ ಶ್ವೇತಾ ವಿಷ್ಣು ಜೋಯಿಸ್, ಶ್ರೀ ನಾಗರಾಜ್, ಶ್ರೀಗುರುಮೂರ್ತಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾರ್ಗದರ್ಶನ ಮಾಡಿದರು.ಆಕೃತಿ ನಿರೂಪಿಸಿ, ಅಚಲ ಪ್ರಾರ್ಥಿಸಿ, ವಿನಾಯಕ ಪ್ರಭು ವಂದಿಸಿದರು.
”ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಹೊರತರಲು ಇಂತಹ ಸಾಂಸ್ಕೃತಿಕ ಶಿಬಿರಗಳು ದಾರಿದೀಪ. ಕೇವಲ ತಾಂತ್ರಿಕ ಶಿಕ್ಷಣಕ್ಕೆ ಒತ್ತು ನೀಡುವ ಈ ಕಾಲದಲ್ಲಿ, ನಮ್ಮ ಮಣ್ಣಿನ ಕಲೆ, ಭಜನೆ ಮತ್ತು ದೇಶಿ ಆಟಗಳ ಮೂಲಕ ಸಂಸ್ಕಾರ ಬಿತ್ತುವ ಕಾರ್ಯ ಶ್ಲಾಘನೀಯ. ಇಲ್ಲಿ ಕಲಿತ ಕಲೆಗಳು ಕೇವಲ ಶಿಬಿರಕ್ಕೆ ಸೀಮಿತವಾಗದೆ ಮಕ್ಕಳ ವ್ಯಕ್ತಿತ್ವದ ಭಾಗವಾಗಲಿ.”
- ಸಂಪಾದಕರು, ವಿಶ್ವಚೇತನ.ಕಾಂ
ಬರಹ: Chetandas Hosamane









