ಕಾರಣಗಿರಿ ದೇವಸ್ಥಾನದಿಂದ ಹೊಸನಗರದವರೆಗೆ ಪಾದಯಾತ್ರೆ; ರೈತರು, ಸಹಕಾರಿ ಸಂಸ್ಥೆಗಳ ಮೂಲಕ ಕೇಂದ್ರಕ್ಕೆ ಆಕ್ಷೇಪಣೆ ಸಲ್ಲಿಸಲು ನಿರ್ಧಾರ

ಹೊಸನಗರ: ಕಸ್ತೂರಿ ರಂಗನ್ ವರದಿ ಹಾಗೂ 7ನೇ ಕರಡು ಅಧಿಸೂಚನೆ ವಿರೋಧಿಸಿ ಪಶ್ಚಿಮ ಘಟ್ಟ ರೈತ ಸಹಕಾರಿ ವೇದಿಕೆ ವತಿಯಿಂದ ಆಗಸ್ಟ್ 29ರಂದು ಕಾರಣಗಿರಿ ದೇವಸ್ಥಾನದಿಂದ ಪಾದಯಾತ್ರೆ ಕೈಗೊಂಡು ಬಳಿಕ ಹೊಸನಗರದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ವಾಟಗೋಡು ಸುರೇಶ್ ತಿಳಿಸಿದರು.


ಸೋಮವಾರ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು 2013 ರಿಂದ ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿಯನ್ನು ಜಾರಿಗೆ ತರುವುದಾಗಿ ಹೇಳಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ರಾಜ್ಯದಲ್ಲಿ ಒಟ್ಟು 1,446 ಗ್ರಾಮಗಳನ್ನು ಕಸ್ತೂರಿ ರಂಗನ್ ವರದಿಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಕೇಂದ್ರ ಸರ್ಕಾರ ಗುರುತಿಸಿದೆ. ಇದರಲ್ಲಿ ಹೊಸನಗರದ 125 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿದೆ.

ಕೇಂದ್ರ ಸರ್ಕಾರವು ಕಸ್ತೂರಿ ರಂಗನ್ ವರದಿಗೆ ಆಕ್ಷೇಪಣೆ ಸಲ್ಲಿಸಲು ಸುಮಾರು 60 ದಿನಗಳ ಕಾಲಾವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಕಸ್ತೂರಿರಂಗನ ವರದಿಯನ್ನು ವಿರೋಧಿಸಿ ನಾವು ಮೊದಲಿಗೆ ಆಗಸ್ಟ್ 29 ರಂದು ಹೊಸನಗರದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು ಪ್ರತಿಭಟನೆಯಲ್ಲಿ ತಾಲೂಕಿನ ಪ್ರತಿಯೊಬ್ಬರು ಪಾಲ್ಗೊಳ್ಳುವ ಮೂಲಕ ವರದಿಯನ್ನು ವಿರೋಧಿಸಬೇಕೆಂದು ಮನವಿಯನ್ನು ಮಾಡಿದರು ಅಷ್ಟೇ ಅಲ್ಲದೆ ಪ್ರತಿಭಟನೆ ಡಿಸಿಸಿ ಬ್ಯಾಂಕ್, ಹಾಲು ಒಕ್ಕೂಟ ಸೇರಿದಂತೆ ನಮ್ಮ ಸಾವಿರಾರು ಸಂಸ್ಥೆಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸುತ್ತೇವೆ. ಈ ಹಿಂದೆ ಕೇರಳದಲ್ಲೂ ಸಹ ಕಸ್ತೂರಿ ರಂಗನ್ ವರದಿಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಿತ್ತು, ಆದರೆ ಅಲ್ಲಿನ ಜನರ ತೀವ್ರ ಹೋರಾಟದಿಂದಾಗಿ ಅದನ್ನು ಕೈಬಿಡಲಾಯಿತು. ಇಲ್ಲಿಯೂ ಸಹ ಅದೇ ರೀತಿಯ ಹೋರಾಟವನ್ನು ರೂಪಿಸಬೇಕಾಗಿದೆ, ಎಂದು ಹೇಳಿದರು. ಬಳಿಕ ಮಾತನಾಡಿದ ಶಿಮುಲು ಅಧ್ಯಕ್ಷರಾದ ವಿದ್ಯಾಧರ್ ಕಸ್ತೂರಿ ರಂಗನ್ ವರದಿ ಜಾರಿಯಾದರೆ ರೈತರು ಉಳುಮೆ ಮಾಡಲು ಟ್ರ್ಯಾಕ್ಟರ್ ಸೇರಿದಂತೆ ಯಾವುದೇ ಯಂತ್ರಗಳನ್ನು ಬಳಸುವಂತಿಲ್ಲ, ರಾಸಾಯನಿಕ ಗೊಬ್ಬರಗಳನ್ನು ಹಾಕುವಂತಿಲ್ಲ, ಡಾಂಬರು ರಸ್ತೆ ನಿರ್ಮಿಸುವಂತಿಲ್ಲ ಹಾಗೂ ಅಡಿಕೆ ಕೊಳೆರೋಗಕ್ಕೆ ಔಷಧಿ ಸಿಂಪಡಿಸುವಂತೆಯೂ ಇಲ್ಲ. ಅಷ್ಟೇ ಏಕೆ, ಕಾಡಿಗೆ ಜಾನುವಾರುಗಳನ್ನು ಬಿಡದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದರು. ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಮಾತನಾಡಿ ಹೊಸನಗರ ತಾಲೂಕಿನ ನಗರ ಭಾಗವು ಅತಿ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವ ಕಾರಣಕ್ಕೆ ಈ ವರದಿಯು ಮತ್ತೊಮ್ಮೆ ಈ ಭಾಗದ ಮರಣ ಶಾಸನವಾಗಲಿದೆ ಆದ್ದರಿಂದ ನಾವೆಲ್ಲರೂ ಒಗ್ಗೂಡಿ ಕಸ್ತೂರಿ ರಂಗನ್ ವರದಿಗೆ ನಮ್ಮ ಸಂಪೂರ್ಣ ವಿರೋಧವಿದೆ, ಎಂದು ಸ್ಪಷ್ಟಪಡಿಸಬೇಕು ಎಂದರು .
ಈ ಸಂದರ್ಭದಲ್ಲಿ ಪ್ರಮುಖರಾದಜಿ ಪರಮೇಶ್ವರ್, ತಿಮ್ಮಪ್ಪ, ವಿನಯ್ ಕುಮಾರ್ ದುಮ್ಮ, ಎ ವಿ ಮಲ್ಲಿಕಾರ್ಜುನ್,ತಿಮ್ಮಪ್ಪ, ಮಹೇಂದ್ರ, ಸುಮಾ ಸುಬ್ರಹ್ಮಣ್ಯ, ಪೂರ್ಣೇಶ್, ಮುರಳಿಧರ್, ಸತೀಶ್, ಎಂಪಿ ರಮಾನಂದ, ವಿನಾಯಕ ಅರಮನೆ. ಉಪಸ್ಥಿತರಿದ್ದರು.
ಬರಹ: Chetandas Hosamane









