
ಹೊಸನಗರ: ತೋಟವೊಂದಕ್ಕೆ ಅಳವಡಿಸಲಾಗಿದ್ದ ಬೋರ್ವೆಲ್ ಹಾಗೂ ಸಬ್ಮರ್ಸಿಬಲ್ ಮೋಟಾರ್ಗಳನ್ನು ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಹೊಸನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಲೂಕಿನ ಕಸಬಾ ಹೋಬಳಿಯ ಅರಳಿಕೊಪ್ಪ ಗ್ರಾಮದ ನಿವಾಸಿಗಳಾದ ಸುಮನ್ (ಅಂಬೇಡ್ಕರ್ ಕಾಲೋನಿ), ಸಂತೋಷ್ (ಭೂವಿ ಕಾಲೋನಿ) ಹಾಗೂ ನಾರಾಯಣ್ (ಅಂಬೇಡ್ಕರ್ ಕಾಲೋನಿ) ಬಂಧಿತ ಆರೋಪಿಗಳು.


ತಾಲೂಕಿನ ಕಸಬಾ ಹೋಬಳಿಯ ಸರ್ವೆ ನಂಬರ್ 16ರಲ್ಲಿರುವ ತೋಟವೊಂದರ ಬಾವಿಗೆ ಅಳವಡಿಸಲಾಗಿದ್ದ 2 HP ಬೋರ್ವೆಲ್ ಮೋಟಾರ್ ಹಾಗೂ ಕೆರೆಗೆ ಅಳವಡಿಸಲಾಗಿದ್ದ 3 HP ಸಬ್ಮರ್ಸಿಬಲ್ ಮೋಟಾರ್ಗಳನ್ನು ಕಿಡಿಗೇಡಿಗಳು ಕಳ್ಳತನ ಮಾಡಿದ್ದರು. ಈ ಕುರಿತು ಏಪ್ರಿಲ್ 26ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ರೈತರ ಪಾಲಿನ ಜೀವನಾಡಿಯಾಗಿದ್ದ ಮೋಟಾರ್ ಕಳ್ಳತನವಾಗಿದ್ದರಿಂದ ರೈತರು ಆತಂಕಕ್ಕೊಳಗಾಗಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಹೊಸನಗರ ಪೊಲೀಸ್ ವೃತ್ತ ನಿರೀಕ್ಷಕರಾದ ಗೌಡಪ್ಪಗೌಡ ಅವರ ಮಾರ್ಗದರ್ಶನದಲ್ಲಿ, ಪಿಎಸ್ಐ ಶಂಕರ್ ಗೌಡ ಪಾಟೀಲ್ ಹಾಗೂ ಸಿಬ್ಬಂದಿಗಳಾದ ಮಾಯಪ್ಪ ಗೋಕಾವಿ, ಸಂದೀಪ್ ಅವರನ್ನೊಳಗೊಂಡ ತಂಡವು ಶೀಘ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಬಂಧಿತರಿಂದ ಕಳವು ಮಾಡಲಾಗಿದ್ದ ಮೋಟಾರ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೊಲೀಸರ ಈ ಕ್ಷಿಪ್ರ ಕ್ರಮಕ್ಕೆ ತಾಲೂಕಿನ ರೈತ ವಲಯದಿಂದ ಶ್ಲಾಘನೆ ವ್ಯಕ್ತವಾಗಿದೆ.
ಬರಹ: Chetandas Hosamane









