
ಹೊಸನಗರ: ವಿಶ್ವದಾದ್ಯಂತ ಮುಸ್ಲಿಂ ಬಾಂಧವರು ಪ್ರವಾದಿ ಇಬ್ರಾಹಿಂರವರ ತ್ಯಾಗ-ಬಲಿದಾನದ ನೆನಪಿನಲ್ಲಿ ಆಚರಿಸುವ ಹಬ್ಬವೇ ‘ಈದುಲ್ ಅದ್ಹಾʼ. ಭಾರತದಲ್ಲಿ ಈ ಹಬ್ಬವನ್ನು ಪವಿತ್ರ ಬಕ್ರೀದ್ ಎಂಬ ಹೆಸರಿನಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ ಎಂದು ಕಳೂರು ಜುಮ್ಮಾ ಮಸೀದಿ (ಜಾಮಿಯಾ ಮಸೀದಿ)ಯ ಖತೀಬರಾದ ಜನಾಬ್ ಮುಹಮ್ಮದ್ ರಿಹಾನ್ ರವರು ತಿಳಿಸಿದರು.
ಹೊಸನಗರ ಟೌನ್ನಲ್ಲಿರುವ ಜಾಮಿಯಾ ಮಸೀದಿಯ ಆವರಣದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ವಿಶೇಷ ನಮಾಜ್ನ ಖುತ್ಬಾ ನಂತರದ ಉಪದೇಶದಲ್ಲಿ ಅವರು ಮಾತನಾಡಿದರು. “ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವುದು ಹಾಗೂ ಸಹೋದರತ್ವ ಬೆಳೆಸಿಕೊಳ್ಳುವುದು ಈ ಹಬ್ಬದ ಪ್ರಮುಖ ಸಂದೇಶವಾಗಿದೆ,” ಎಂದು ಅವರು ಅಭಿಪ್ರಾಯಪಟ್ಟರು.

”ಪ್ರವಾದಿ ಇಬ್ರಾಹಿಂ ಅವರು ಅಲ್ಲಾಹುವಿನ ಆದೇಶದಂತೆ ತಮ್ಮ ಪ್ರೀತಿಯ ಏಕೈಕ ಪುತ್ರ ಹಜರತ್ ಇಸ್ಮಾಯಿಲ್ ರವರನ್ನು ಬಲಿ ನೀಡಲು ಸಿದ್ಧರಾದ ಸಂದರ್ಭದ ಅವರ ತ್ಯಾಗವನ್ನು ನೆನಪಿಸುವುದು ಈ ಹಬ್ಬದ ವೈಶಿಷ್ಟ್ಯ. ಅಲ್ಲದೆ, ಸೌದಿ ಅರೇಬಿಯಾದ ಮಕ್ಕಾದಲ್ಲಿ ಪವಿತ್ರ ಹಜ್ ಯಾತ್ರೆ ನಡೆಯುವ ಸಮಯದಲ್ಲೇ ಈ ಹಬ್ಬ ಆಚರಿಸಲಾಗುತ್ತದೆ. ಜೀವನದಲ್ಲಿ ಒಂದು ಬಾರಿಯಾದರೂ ಹಜ್ ಯಾತ್ರೆ ಕೈಗೊಳ್ಳಬೇಕು ಎಂದು ಇಸ್ಲಾಂ ಹೇಳುತ್ತದೆ. ಹಜ್ನ ಧಾರ್ಮಿಕ ವಿಧಿ-ವಿಧಾನಗಳು ಈ ಹಬ್ಬದೊಂದಿಗೆ ಮುಕ್ತಾಯಗೊಳ್ಳುತ್ತವೆ,” ಎಂದು ವಿವರಿಸಿದರು.

ಬಳಿಕ ಸರ್ವರಿಗೂ ಬಕ್ರೀದ್ ಶುಭಾಶಯ ಕೋರಿದ ಅವರು, ಜಗತ್ತಿನಾದ್ಯಂತ ನೆಮ್ಮದಿ, ಸುಖ-ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿದರು. ಜೊತೆಗೆ, ಪವಿತ್ರ ಹಜ್ ಯಾತ್ರೆಯಲ್ಲಿರುವ ತಮ್ಮ ಜಮಾತಿನ ಎಲ್ಲಾ ಸದಸ್ಯರು ಮತ್ತು ಅವರೊಂದಿಗೆ ತೆರಳಿರುವ ಎಲ್ಲಾ ಹಜ್ ಯಾತ್ರಿಕರ ಸುಖಾಗಮನಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಪ್ರತಿ ವರ್ಷದಂತೆ ಈ ವರ್ಷವೂ ಹಳೆ ಸಾಗರ ರಸ್ತೆಯಲ್ಲಿ ಈದ್ ನಮಾಝ್ ನಿರ್ವಹಿಸಲು ಪೂರ್ವ ನಿಗದಿಯಾಗಿತ್ತು. ಆದರೆ, ಮಳೆಯ ಕಾರಣ ನಮಾಝ್ ಅನ್ನು ಮಸ್ಜಿದ್ನಲ್ಲಿಯೇ ನಿರ್ವಹಿಸಲಾಯಿತು.

ಆಡಳಿತ ಕಮಿಟಿಯ ಬಹುತೇಕ ಎಲ್ಲಾ ಪದಾಧಿಕಾರಿಗಳು, ಜಮಾತಿನ ಸದಸ್ಯರು, ಸಮುದಾಯದ ಮುಖಂಡರು, ಯುವಕರು ಮತ್ತು ಪುಟಾಣಿ ಮಕ್ಕಳು ಪರಸ್ಪರ ಆಲಂಗಿಸಿಕೊಳ್ಳುವುದರ ಮೂಲಕ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಬರಹ: Chetandas Hosamane









